Saturday, July 18, 2015

1979 ಇಂಗ್ಲಿಷ್ - ವಿಂಗ್ಲಿಶ್. ಇದು ನನ್ನ ಅನುಭವ !

1979 ಇಂಗ್ಲಿಷ್ - ವಿಂಗ್ಲಿಶ್. ಇದು ನನ್ನ ಅನುಭವ !  

    ನನ್ನವರು ಮೊದಲ ಬಾರಿ HMT ಯಿಂದ ಬಾಗ್ದಾದ್ ಗೆ ಡೆಪ್ಯುಟ್ ಆದಾಗ ನನಗೆ ಖುಷಿಯಾದರೂ ಇಬ್ಬರು ಮಕ್ಕಳನ್ನು ಒಂದೆರಡು ವರ್ಷ ಬಿಟ್ಟಿರುವುದು ಹೇಗೆ ? ಎಂಬುದು ದೊಡ್ಡ ಪ್ರಶ್ನೆಯಾಗಿತ್ತು. ತಿಂಗಳಿಗೆ ಒಂದು ಸಾವಿರ ಸಂಬಳ ಎಣಿಸುತ್ತಿದ್ದ ಆ ಕಾಲಕ್ಕೆ ತಿಂಗಳಿಗೆ 7000 ರೂ. ವಿದೇಶೀ ಸಂಬಳದ ಮೋಹ ಸೆಳೆದಿತ್ತು. ಜವಾಬ್ದಾರಿಗಳನ್ನು ದಡ ಮುಟ್ಟಿಸುವ ಸಲುವಾಗಿ ಹಣದ ಅವಶ್ಯಕತೆಯೂ ಇತ್ತು. ನಾನು ಸೇರಿದ್ದೇ ದೊಡ್ಡ ಕುಟುಂಬವಾದ್ದರಿಂದ ಎಲ್ಲಿ ಬಿಡಬೇಕೆಂಬ ಯೋಚನೆ ಕಿಂಚಿತ್ತೂ ಇರಲಿಲ್ಲ. ಅತ್ತೆ ಮಾವ , ಓರಗಿತ್ತಿ ಭಾವನವರು, ಮೈದುನ ನಾದಿನಿಯರು, ಓರಗೆಯ ಮಕ್ಕಳು, ಹೀಗೆ ದೊಡ್ಡ ಕುಟುಂಬವೇ ! ಸಿಕ್ಕ ಅವಕಾಶ ಬಿಡಬಾರದು ಎಂಬ ದೃಷ್ಟಿಯಿಂದ ಹೊರಡುವ ನಿರ್ಧಾರ ಮಾಡಿದೆ. ನನ್ನವರು ಅವರ HMT ಸಂಸಾರದೊಡನೆ ಮೊದಲು ಹೊರಟುಬಿಟ್ಟರು . ನಾನು ಹೊರಟಿದ್ದು ಕೆಲವು ತಿಂಗಳಿನ ನಂತರ ವಿದೇಶಕ್ಕೆ ಬೇಕಾಗಿದ್ದ ಪಾಸ್ ಪೋರ್ಟ್, ವೀಸಾ ಎಲ್ಲಾ ಆಗಬೇಕಿತ್ತು. ಇದಕ್ಕೆ ಸಮಯವೂ ಬೇಕಿತ್ತು . 

     ಇವರು ಹೊರಟ ದಿನ ಮನೆಯ ಮುಂದೆ HMT ವತಿಯಿಂದ ಎರಡು ಕಾರು. ಮೊದಮೊದಲು ನಮ್ಮ ಸಂಸಾರದಿಂದ ವಿದೇಶಕ್ಕೆ ಹೊರಟವರು ಏನೋ ಸಂಭ್ರಮ, ಸಡಗರ !! ಏರ್ಪೋರ್ಟ್ ನ ವಿದ್ಯಮಾನಗಳನ್ನು ಕಾಣಲು ವಯಸ್ಸಾದವರಿಗೆ ಮೊದಲ ಆದ್ಯತೆ. ಹಾಗಾಗಿ ನನ್ನ ಅತ್ತೆ, ಭಾವ, ಓರಗಿತ್ತಿ, ನನ್ನ ತಂದೆತಾಯಿ, ನಾನು, ನನ್ನ ಮಕ್ಕಳು ಹೊರಟಿದ್ದು ಬೆರಗಿನಿಂದ ವಿಮಾನ ನಿಲ್ದಾಣ ನೋಡಿದೆವು. ಚಿತ್ರದುರ್ಗದಲ್ಲಿದ್ದ ನನ್ನ ಚಿಕ್ಕಪ್ಪ, ಏರ್ಪೋರ್ಟ್ ಗೆ ಅಳಿಯನನ್ನು ಬೀಳ್ಕೊಡಲು ಹಾರ ತುರಾಯಿಗಳೊಂದಿಗೆ ಬಂದದ್ದು, ಅಂದಿನ ಸಂಸ್ಕೃತಿಯ ಕನ್ನಡಿ. ಅದೆಲ್ಲ ಇತಿಹಾಸಕ್ಕೆ ಸೇರಿಹೋದ ಸಮಾಚಾರ ! ಆಗ ನಿಲ್ದಾಣದ ಪಕ್ಕದಿಂದ ಮೊದಲ ಮಹಡಿಗೆ ಹೋಗಲು ಮೆಟ್ಟಿಲಿತ್ತು. ಅದರ ಮೂಲಕ ಮೇಲೇರಿ ಹೊರಡುವವರು ವಿಮಾನದ ಒಳಗೆ ಏರುವವರೆಗೂ ನೋಡಬಹುದಿತ್ತು. ಈಗ ಎಲ್ಲ ಬದಲಾಗಿದೆ.  
ನಂತರ ನನ್ನ ಪ್ರಯಾಣಕ್ಕೆ ಬೇಕಾದ ಸಿದ್ದತೆ. ಮಕ್ಕಳಿಗೆ ರಜೆಯಲ್ಲಿ ಬರಲು ಪಾಸ್ ಪೋರ್ಟ್ ಎಲ್ಲ ರೆಡಿ ಮಾಡಬೇಕಿತ್ತು. ಇದಕ್ಕಾಗಿ ಶಾಲೆಗೆ ರಜೆ ಹಾಕಿಸಿ ಕಾರ್ಪೋರೇಶನ್ ಪ್ರಾಂಗಣದಲ್ಲಿ ಮಕ್ಕಳಿಗೆ ಐಸ್ ಕ್ರೀಂ ಕೊಡಿಸಿ, ಅವರ ಆರೋಗ್ಯ ಸ್ಥಿತಿ ತಪಾಸಣೆ ಮಾಡಿಸಿ ಯಾವುದೋ ಸೂಜಿ ಚುಚ್ಚಿಸಿದ್ದೂ ಆಯ್ತು. ನಾನು ತೆಗೆದುಕೊಳ್ಳಬೇಕಾದ ಅಡಿಗೆಗೆ ಬೇಕಾದ ಪುಡಿಗಳು, ಬಾಗ್ದಾದ್ ನಲ್ಲಿ ಸಿಕ್ಕದ ಪ್ರಾವಿಷನ್, ತೆಗೆದಿಡುವುದರಲ್ಲಿ ತಿಂಗಳುಗಳೇ ಆಯ್ತು. ಅಲ್ಲಿಗೆ ಬೇಕಾದ ಪಾಸ್ಪೋರ್ಟ್ ರೆಡಿ ಆಯ್ತು. ವೀಸಾಗೆ ಕಾದಿದ್ದು ಏರ್ ಟಿಕೆಟ್  ಬಂದಾಯ್ತು .ಅಟ್ಯಾಕ್ ಪ್ರಯಾಣ ಒಂದು ವಾರಕ್ಕೆ ತಳ್ಳಿಹೋಯ್ತು. 

      ನಮ್ಮ ವೀಸಾ ಬರುವ ವಿಮಾನಕ್ಕೆ ಹಕ್ಕಿ ಅಟ್ಯಾಕ್ ಮಾಡಿದ್ದರಿಂದ ಪ್ರಯಾಣ ಒಂದು ವಾರಕ್ಕೆ ತಳ್ಳಿಹೋಯ್ತು. ಪುನಃ ರೆಡಿ ಮಾಡಿಕೊಂಡು ಹೊರಟೆವು. HMT ಅಧಿಕಾರಿಯೊಬ್ಬರು ನನ್ನ ಬಳಿ ಆಫೀಸ್ ಲಕೋಟೆ ಕೊಟ್ಟು ಅದನ್ನು ತೆಗೆದು ನೋಡಬಾರದೆಂದೂ ಹೋದೊಡನೆ ಅಲ್ಲಿನ HMT ಉನ್ನತಾಧಿಕಾರಿಗಳಿಗೆ ಕೊಡಬೇಕೆಂದೂ  ತಿಳಿಸಿದರು. ಸರಿ ! ಆಯ್ತು ಅಂದೇ.  

ನನ್ನ  ಮೊದಲ ವಿಮಾನಯಾನ ಆರಂಭವಾಯ್ತು !! ನನ್ನ ಜೊತೆಯಲ್ಲಿ ಶಿವಮೊಗ್ಗೆಯ ರಮಾ, ಕೇರಳದ ಅನ್ನಿ ಪಾಲ್ ಥಾಮಸ್ ಬಂದರು. ಕೇರಳದವರ ಎರಡು ಮಕ್ಕಳೂ ಸೇರಿ ಐದು ಮಂದಿ. ಇಲ್ಲಿಂದ ಬೊಂಬಾಯಿಗೆ ತಲುಪಿದಾಗ ಅಲ್ಲಿ HMT ಅಧಿಕಾರಿಯೊಬ್ಬರು  ಬಂದಿದ್ದು ನಮ್ಮನ್ನು  ಏರ್ಪೋರ್ಟ್ ಬಳಿಯಿದ್ದ ಸೆಂಟಾರ್ ಹೋಟೆಲ್ ಗೆ ಬಿಟ್ಟು ರಾತ್ರಿ ಪುನಃ ಬಾಗ್ದಾದ್ ವಿಮಾನ ಹೊರಡುವ ಮುನ್ನ ಬರುತ್ತೇನೆಂದು ಹೇಳಿ ಹೊರಟುಹೋದರು. 
         
     ಆ ದೊಡ್ಡ 5 ಸ್ಟಾರ್ ಹೋಟೆಲ್ ನೋಡಿ ಏನೋ ಹೇಗೋ ಎಂದುಕೊಂಡೆ. ಸರಿಯಾಗಿ ಮಾತಾಡಲು ಇಂಗ್ಲಿಷ್, ಹಿಂದಿ ಯಾವುದೂ ಬಾರದು. ಪರಿಸ್ಥಿತಿ ಸಂದಿಗ್ಧವಾಯ್ತು. ಹೇಗಾದರೂ ಸಂಭಾಳಿಸಬೇಕಿತ್ತು. ಊಟ, ತಿಂಡಿ, ಕಾಫಿ, ಟೀ ಏನು ತೆಗೆದುಕೊಂಡರೂ ವೋಚರ್ ಪಡೆಯಬೇಕಿತ್ತು. ಇದ್ದಷ್ಟು ದುಡ್ಡನ್ನು ಡಾಲರ್ಗೆ ಬದಲಾಯಿಸಿ ಸ್ವಲ್ಪ ಹಣವನ್ನು ಮಾತ್ರ ಇಟ್ಟುಕೊಂಡಿದ್ದೆವು. ವೋಚರ್ ಎಂದರೇನೆ ನಮಗೆ ತಿಳಿಯದು. ಅದರ ಸಹವಾಸ ಬೇಡವೆಂದರೆ ಹೊಟ್ಟೆಗಿರದ ಪರಿಸ್ಥತಿ ! ನಮ್ಮ ಮನಸ್ಸಿನಲ್ಲಿ ಸೆಂಟಾರ್ ಹೋಟೆಲ್ ಹೋಗಿ   ಸೆರೆಮನೆಯಾಯ್ತು. 

     ಹೇಗಿದ್ದರೂ ಒಂದರ್ಧ ದಿನ ತಾನೇ ? ಎನಿಸಿತು. ಬೆಳಗಿನ ನಾಲ್ಕು ಗಂಟೆಯ ಇರಾಕ್ ಏರ್ವೇಸ್ ಏರಲು ರಾತ್ರಿ ಹನ್ನೆರಡೂವರೆಗೆ ಹೋಗುವುದಾಗಿತ್ತು. ಸರಿ, ಊಟದ ಟೈಮ್ ಬಂತು, ರೂಂ ನಲ್ಲಿದ್ದ ಫೋನ್ ಉಪಯೋಗಿಸಲು ಗೊತ್ತಿರಲಿಲ್ಲ. ಕಷ್ಟಪಟ್ಟು ಕಿಚನ್ ಫೋನ್ ನಂಬರ್ ಹುಡುಕಿ ಇಂಗ್ಲಿಷ್ನಲ್ಲಿ  ಸೆಂಟೆನ್ಸ್ ಎಲ್ಲ ರೆಡಿ ಮಾಡಿಕೊಂಡು ಹೆದರುತ್ತಲೇ ಫೋನಾಯಿಸಿದೆ. ಆ ಹೋಟೆಲ್ ಸ್ಟೈಲ್ ಗೆ ಅನುಗುಣವಾಗಿ ಅತ್ತ ಕಡೆಯಿಂದ ಉತ್ತರ ಬಂತು. ಅವನು ಕೇಳುವ ಮುನ್ನವೇ 'ಪ್ಯೂರ್ ವೆಜಿಟೇರಿಯನ್. ಸೆಂಡ್ ಟೂ ಪ್ಲೇಟ್ ಮೀಲ್ಸ್ ಐ ಸೇ' ಅಂದು ಫಟ್ ಅಂತ ಫೋನಿಟ್ಟೆ. ಇನ್ನೇನಾದರೂ ಕೇಳಿದರೆ ಉತ್ತರಿಸುವ ಸ್ಥಿತಿಯಲ್ಲಿ ನಾನಿರಲಿಲ್ಲ. 

ಕಾದು ಕಾದೂ ಸಾಕಾಯ್ತು 'ಹೇಳ್ಕೋಳ್ಳೋಕ್ ದೊಡ್ ಹೋಟ್ಲು, ಸರ್ವಿಸು ಪರಪಾಟ್ಲು' ಅನ್ನೋ ಹಾಗಿತ್ತು. ಅಂತೂ ಇಂತೂ ಸ್ಟೈಲ್ ಆಗಿ ಊಟ ಅಂತೂ ತಂದಿಟ್ಟು ಹೊರಟ. ವೋಚರ್ ಅಂದೇ.. 'ಯೆಸ್ ಮೇಡಂ' ಎಂದು ಹೊರಟುಹೋದ. ವೋಚರ್ ನ್ನು ನಾವು ಹೋಟೆಲ್ ನವರಿಗೆ ಕೊಡಬೇಕೋ ಅಥವಾ ಹೋಟೆಲ್ ನವರು ನಮಗೆ ಕೊಡುತ್ತಾರೋ ಅದೇ ತಿಳಿದಿರಲಿಲ್ಲ. ಅವರೇ ಸ್ವಲ್ಪ ಹೊತ್ತಿನ ನಂತರ ತಂದು ಸಹಿ ಹಾಕಿಸಿಕೊಂಡು ಹೋಗಿದ್ದರು. ನೆಮ್ಮದಿಯ ನಿಟ್ಟುಸಿರಿಟ್ಟೆ. 
     ನಾನು, ರಮಾ ಒಂದೇ ರೂಮಿನಲ್ಲಿ ಇದ್ದುದರಿಂದ ಊಟಕ್ಕೆ ಅಂದವಾಗಿ ಜೋಡಿಸಿದ್ದ, ಕುರ್ಚಿಯಲ್ಲಿ ಕುಳಿತು ಥಾಲಿ ಓಪನ್ ಮಾಡಿದೆವು. ನೋಡಲು ಸೊಗಸಾಗಿತ್ತು. ಆದರೆ ಎಲ್ಲವೂ ತಣ್ಣಗೆ. ಪೂರಿಯ ಜೊತೆಗೆ ಮೆಹೆಂದಿ ಪೇಸ್ಟ್ ನಂತೆ ಯಾವುದೋ ಹಸಿರು ಬಣ್ಣದಲ್ಲಿದ್ದ ಪಲ್ಯ. ಅದರ ಮಧ್ಯೆ ಬಿಳಿಬಿಳಿಯಾಗಿ ತುಂಡುಗಳು. ಮೆಲ್ಲಗೆ ತುಂಡೊಂದನ್ನು ಪ್ರೆಸ್ ಮಾಡಿದೆ. ಮೆತ್ತಗಿತ್ತು. ಭಯವಾಯ್ತು. ರಮಾಗೆ ಹೇಳಿದೆ ' ರಮಾ, ಇದು ಏನೋ ನಾನ್- ವೆಜ್ ಇದ್ದಹಾಗಿದೆ. ಏನ್ ಮಾಡೋದು ? ಅಷ್ಟು ಹೇಳಿದ್ರೂ ತಂದಿರೋದು ನೋಡು, ಹೊಲಸು' ! ಎಂದೇ. 
ಆದ್ರೆ ಹಸಿವು ಯಾರನ್ ಬಿಟ್ಟಿದ್ದು ? ಆ ಬಟ್ಟಲನ್ನು  ಹಾಗೇ ಹೊರಗಿಟ್ಟು ಮಿಕ್ಕದ್ದನ್ನು ಹೊಟ್ಟೆಗೆ ತಲುಪಿಸಿದ್ದಾಯ್ತು. ಸುಮಾರು ದಿನಗಳ ನಂತರ ಆ ಬಟ್ಟಲಿನಲ್ಲಿದ್ದ ಪಲ್ಯ  ಪಾಲಕ್ ಪನೀರೆಂದು ತಿಳಿಯಿತು !! ಮಾಡೋಕ್ಕೆ ಬರದು ಪುಕ್ಕಟೆ ಸಿಕ್ಕಿದ್ದು ಬಿಸಾಕಿದ್ದೆ.  ಪಶ್ಚಾತ್ತಾಪವಾಯ್ತು. ಏನ್ ಪ್ರಯೋಜನ ? 
ರಾತ್ರಿ ಸ್ವಲ್ಪ ಮಲಗಿದ ಶಾಸ್ತ್ರ ಮಾಡಿ 12.30 ಕ್ಕೆ ಏರ್ಪೋರ್ಟ್ ಗೆ ಹೊರಟೆವು. ನಮ್ಮನ್ನು ಕಳಿಸಲು ಬಂದಿದ್ದ HMT ವ್ಯಕ್ತಿಯೂ ಅಲ್ಲಿ ನಮ್ಮನ್ನಿಳಿಸಿ ಹೊರಟು ಹೋದರು. ಸರಿ, ತಪಾಸಣೆ, ಡಾಲರ್ ಕನ್ವರ್ಷನ್ ಎಲ್ಲ ಮುಗಿಸಿ ಇನ್ನೇನು ಒಳಗೆ ಹೋಗಬೇಕು ಎನ್ನುವಾಗ, ಇದ್ದಕ್ಕಿದ್ದಂತೆ NOC ಲೆಟರ್ ಬೇಕೆಂದರು. ಇಲ್ಲದಿದ್ದಲ್ಲಿ ನೀವು ಇಂಡಿಯಾ ಬಿಟ್ಟು ಹೊರಡುವಂತಿಲ್ಲ. ಜಂಘಾಬಲವೇ ಉರುಳಿದಂತಾಯ್ತು. ನಮಗೋ ಆ NOC ಗೆ ಅರ್ಥವೇ ಗೊತ್ತಿರಲಿಲ್ಲ. 
ನಮ್ಮದೇ ಆದ ಹರಕು ಹಿಂದಿಯಲ್ಲಿ ನಮ್ಮ ಗಂಡಂದಿರು ಬಾಗ್ದಾದ್ ಗೆ ಕೆಲಸದ  ಮೇಲೆ ಹೋಗಿದ್ದಾರೆ ಎಂದರೂ ನಂಬಲಿಲ್ಲ. ನಿಮ್ಮ ಗಂಡ ಅಂತಾ ಏನ್ ಗ್ಯಾರಂಟೀ ? ಅಂದ್ರೆ Answer ಮಾಡೋದ್ ಹೇಗೆ ? ತಲೆ ಚಚ್ಕೋಳೋ ಹಾಗಾಯ್ತು ಕರ್ಮ ಅನ್ಕೊಂಡೆ.. !!  ವಾಗ್ವಾದ ನಡೆಯುತ್ತಿದ್ದಂತೆ , ಬಾಗ್ದಾದ್ ಫ್ಲೈಟ್ ,  ಬೆಳಗಿನ ಜಾವ ನಾಲ್ಕಕ್ಕೆ ನಮ್ಮ ಕಣ್ಣೆದುರಿನಲ್ಲೇ ಮುಗಿಲಿಗೇರಿತ್ತು ! ಅಳು ಬರುವಂತಾಯ್ತು. ಬರುವುದೇನು ? ಅತ್ತೇ ಬಿಟ್ಟೆವು.  
ಇದು ಯಾರಿಗೆ ಬೇಕಿತ್ತು ? ಅತ್ತ ಗಂಡನ ಊರೂ ಇಲ್ಲ, ಇತ್ತ ಅತ್ತೆಮನೆಯೂ ಇಲ್ಲ.  ತ್ರಿಶಂಕು ಪರಿಸ್ಥಿತಿ ! ಆಗಿನ ಕಾಲಕ್ಕೆ ಸೆಲ್ ಫೋನ್ ಇರಲಿಲ್ಲ. ಸೆಲ್ ಫೋನೇನು ? ಲ್ಯಾಂಡ್ ಲೈನ್ ಬಳಸೋಕೂ ಗೊತ್ತಿರ್ಲಿಲ್ಲ. ಫೋನ್ ನಂಬರ್ ಇಟ್ಟುಕೊಳ್ಳದೆ ದೂರದ ಪ್ರಯಾಣ ಕೈಗೊಂಡಿದ್ದೆವು. ಯಾರನ್ನು ಕಾಂಟಾಕ್ಟ್ ಮಾಡಬೇಕು ? ಎಲ್ಲಿ ಹೋಗಬೇಕು ? ಹೋಟೆಲ್ ಟ್ರಾನ್ಸಿಟ್ ಇದ್ದುದು ಒಂದು ದಿನಕ್ಕೆ ಮಾತ್ರ. ಬೆಳಗ್ಗೆ ಹತ್ತರವರೆಗೆ ಅಲ್ಲಿಯೇ ಕುಳಿತಿದ್ದು ಸಿಬ್ಬಂದಿಯನ್ನು ಕೇಳಿ HMT ಆಫೀಸಿಗೆ ಕಾಂಟಾಕ್ಟ್ ಮಾಡಿಸಿದೆವು. ಅಲ್ಲಿಂದ ಒಬ್ಬರು ಬಂದು ನಮ್ಮನ್ನು HMT ಆಫೀಸಿಗೆ ಕರೆದುಕೊಂಡು ಹೋದರು. ಫೋನ್ ಬಳಕೆಯ ವಿಧಾನವೇ ಗೊತ್ತಿರಲಿಲ್ಲ. ಅವರೇ ಡಯಲ್ ಮಾಡಿಕೊಟ್ಟನಂತರ ಅಲ್ಲಿಂದ ಬೆಂಗಳೂರು ಆಫೀಸಿಗೆ ನಾವೇ ಮಾತಾಡಿ ವಿಷಯ ತಿಳಿಸಿದೆವು. 
ಪುನಃ ಮತ್ತೊಂದು ದಿನಕ್ಕೆ ಸೆಂಟಾರ್ ಹೋಟೆಲ್ ತಾತ್ಕಾಲಿಕವಾಗಿ ನಮ್ಮದಾಯ್ತು. ಮರುದಿನ ಬೆಂಗಳೂರು ಅಧಿಕಾರಿಯೊಬ್ಬರು ಬಂದು ನಮಗೆ ಬೇರೆ ಹೋಟೆಲ್ ಗೊತ್ತು ಮಾಡಿದರು. ಅಲ್ಲಿಗೆ ನಮ್ಮ ಎತ್ತಂಗಡಿ. ಅಲ್ಲಿಗೆ ನಮ್ಮ ಪ್ರಯಾಣ ಪುನಃ ಒಂದು ವಾರ ಮುಂದಕ್ಕೆ ಹೋಯ್ತು. ಮುಂದಿನ ಬುಧವಾರ ಬಂದು ಫ್ಲೈಟ್ ಹತ್ತಿಸುತ್ತೇವೆಂದು ಹೇಳಿ ಅವರೂ ಹೊರಟರು. 
ಭಾಷೆ ಗೊತ್ತಿಲ್ಲದ ಊರೇ ತಿಳಿಯದೆಡೆ ಪರಿಚಯದವರೂ ಇಲ್ಲದ ಕಡೆ ಒಂದು ವಾರ ಕಳೆಯುವುದು ಹೇಗೆ ? ತಿಳಿಯಲಿಲ್ಲ. ಸ್ವಲ್ಪ ಹೊತ್ತಾದ ನಂತರ ಅಕಸ್ಮಾತ್ತಾಗಿ ರಮಾಳ ಅಕ್ಕ ಭಾವ ವಾಶಿ ಟೌನ್ ಶಿಪ್ ನಲ್ಲಿರುವುದು ತಿಳಿದ ಅವಳೇ ಸಂಪರ್ಕಿಸಿದಳು. ಅವಳ  ಅಕ್ಕ ಭಾವನೊಡನೆ  'ಅಳಿಯನ ಜೊತೆ ಗೆಳೆಯ' ಎಂದು ನಾನೂ ಹೊರಟೆ.  

ಬೊಂಬಾಯಿಯಲ್ಲಿ ಸ್ವಲ್ಪ ವೀಕ್ಷಣೆಯ ತಾಣಗಳನ್ನೂ ನೋಡಿ ಅವರ ಮನೆಯಲ್ಲೇ ಎರಡು, ಮೂರುದಿನ ಇದ್ದು ಬಂದೆವು. ಖಂಡಿತ ಅವರನ್ನು ಸ್ಮರಿಸಬೇಕು ! ಅಲ್ಲಿದ್ದು ಬಂದಮೇಲೆ , ಒಂದೆರಡು ಹಗಲು ಹೋಟೆಲ್ ನಲ್ಲೆ ಆಶ್ರಯ. ಆ ಹೋಟೆಲ್ ಊಟ ಬೇಸರ ತರಿಸಿತ್ತು. ಒಂದು ದಿನ ಹಗಲಿನಲ್ಲೇ ರಸ್ತೆಯ ಅಂಗಡಿಗಳ ಜಾಡು ಹಿಡಿದು ನಡೆಯುತ್ತಿದ್ದಾಗ , ಉಡುಪಿ ಹೋಟೆಲ್ ಎಂಬ ಬೋರ್ಡ್ ಕಾಣಿಸಿತು. ಅಲ್ಲೇ  ಏನಾದರೂ ತಿಂದು ಬರೋಣವೆಂದು ಹೋದೆವು. ಒಳಗೆ ಕುಳಿತಾಗ ನಾವು ಕನ್ನಡದಲ್ಲಿ ಮಾತಾಡಿದ್ದು ನೋಡಿ ,  ಅವರೂ ಕನ್ನಡದಲ್ಲೇ ಮಾತನಾಡಿದ್ದು ನಮಗೆ ಸ್ವರ್ಗಕ್ಕೆ ಮೂರೇ ಗೇಣು ! ಎಂಬಂತಾಯ್ತು.  ಖುಷಿಯಾಗಿ, ಬಿಸಿಬಿಸಿಯಾಗಿ ಊಟ ಮಾಡಿ ತೃಪ್ತಿಯಾಗಿ ಬಂದು ರೂಂ ಸೇರಿದೆವು. ಮರುದಿನವೂ ಅಲ್ಲೇ ತಿಂಡಿ ಊಟ ಎಂದು ಬೇರೆಯಾಗಿ ಹೇಳಬೇಕಿಲ್ಲ . 

ಅಂತೂ ಇಂತೂ ಬುಧವಾರ ಬಂತು. ಆಗ ಇದ್ದದ್ದೇ ವಾರಕ್ಕೊಂದು ಫ್ಲೈಟ್. ಪ್ರತೀ ಬುಧವಾರ. ಬೆಂಗಳೂರು HMT ಯ Mr. ಕುರುಪ್ ರವರು ಬಂದು ನಾವು ಏರೋಪ್ಲೇನ್  ಏರುವವರೆಗೆ ಅಲ್ಲಿದ್ದರು. ದುಬೈ ಮಾರ್ಗವಾಗಿ ನಾವು ಬಾಗ್ದಾದ್ ತಲುಪಿದಾಗ ಇಡೀ HMT ಯ ಕನ್ನಡಿಗರ ಗುಂಪು ರಣರಂಗದಿಂದ ಗೆದ್ದು ಬಂದ ವೀರರನ್ನು ಸ್ವಾಗತಿಸುವಂತೆ,  ನಮ್ಮನ್ನು ಎದುರುಗೊಂಡಿದ್ದರು  !!!!  HMT ಅಧಿಕಾರಿಗಳು ಕೊಟ್ಟ ಲಕೋಟೆ ಮತ್ತಾವುದೂ ಅಲ್ಲ, ನಮ್ಮವರ ಪ್ರಮೋಷನ್ ಲೆಟರ್ !! .. 

No comments:

Post a Comment