Friday, July 17, 2015

2002 ಕಾವೇರಿಯ ಸುತ್ತ ಮುತ್ತ.

🐝  2002 ಕಾವೇರಿಯ ಸುತ್ತ ಮುತ್ತ. 
ಕರಿಘಟ್ಟದ ನೃಸಿಂಹ, ನಿಮಿಷಾಂಬಾ, ಗೊಸಾಯೀ ಘಾಟ್ , ಬಲಮುರಿ.

ವರ್ಷಕ್ಕೊಮ್ಮೆ ಹೋಗುವ ಪ್ರವಾಸದಲ್ಲಿ ಇದೂ ಒಂದು. ನಾನು ಕುಮುದಾ, ನನ್ನ ಸಂಬಂಧಿ ರುಕ್ಮಿಣಿ, ಜಮ್ಮಿ, ಲತಾ, ಗೀತಾ, ಗೋದ, ರಾಜಿ, ಸಂಧ್ಯಾ, ಶಾಮನ ಹೆಂಡತಿ ವೀಣಾ,  ರಮೇಶನ ಹೆಂಡತಿ ಪ್ರಫುಲ್ಲ, 5 / 6 ಮಂದಿ ಪಡ್ಡೆಗಳು ಪ್ಲಾನ್ ಮಾಡಿದ್ದು ಕಾವೇರೀ ತೀರಕ್ಕೆ .
ಬೆಳಿಗ್ಗೆ ಆರು ಗಂಟೆಗೆ ನಾನು handy gas, ಕಾರ್ಪೆಟ್, ಕಿಚನ್ ಕಿಟ್, ನನ್ನ ಐಟಂ ಸಕ್ಕರೆ ಪೊಂಗಲ್ ಪ್ಯಾಕ್ ಮಾಡಿ ಟೆಂಪೋ ಟ್ರಾವೆಲ್ ಏರಿ  ಜಮ್ಮಿ ಮನೆಗೆ ಹೋದೆ. ಸುತ್ತಲಿನ ಕಸಿನ್ಸ್ ಎಲ್ಲ ಅವರವರ ತಿಂಡಿ ತೀರ್ಥಗಳೊಡನೆ ಬಸ್ ಏರಿ ವಿಜಯನಗರದಲ್ಲಿ ರುಕ್ಮಿಣಿ , ಕುಮುದ, ಗೀತ, ಬಂದು ಸೇರಿದರು. ಬೆಂಗಳೂರು ಬಿಟ್ಟಾಗ 7 ಗಂಟೆ. ಮದ್ದೂರಿನಲ್ಲಿರುವ  " ಬೆಟ್ಟದ ನರಸಿಂಹಸ್ವಾಮಿ " ಕ್ಷೇತ್ರ ತಲುಪಿದಾಗ  8.30.
ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಮದ್ದೂರಿಗೂ ಮುಂಚೆ ಎಡಭಾಗದಲ್ಲಿ, ದೊಡ್ಡದೊಂದು ಆರ್ಚ್ ಸಿಗುತ್ತದೆ. ಇದರೊಳಗೆ ಸಾಗಿದಾಗ 8 km ದಾರಿ ಸವೆಸಿದಾಗ  ಸಿಗುವುದೇ ಈ ಕ್ಷೇತ್ರ. ಪ್ರಶಾಂತ ಪರಿಸರ, ಪ್ರಕೃತಿ ಪ್ರಿಯರಿಗೆ ಹಬ್ಬ. ಮಳೆಗಾಲ ಮುಗಿದು ಇಲ್ಲಿಗೆ ಬಂದರೆ ಹಸಿರಿನ ಹಂದರ. ಹಸಿರಿನ ಮೇಲೆ ಬೀಸಿ ಬರುವ ಗಾಳಿಗಂತೂ ವಿಶೇಷ ಪರಿಮಳ. ಅರ್ಚಕರು ಬರುವುದು ತಡವಾದ್ದರಿಂದ ಇಡ್ಲಿ ಕಾಫಿ ಮುಗಿಸಿ ಶುಭ್ರ ಗಾಳಿಯಲ್ಲಿ ತಿರುಗಾಟ, ಸನ್ನಿಧಿ ದರ್ಶನ, ಸ್ತೋತ್ರ , ಮಂಗಳಾರತಿ, ತೀರ್ಥ, ಕಾಣಿಕೆ , ಮುಗಿಸಿ  ಕರಿಘಟ್ಟಕ್ಕೆ ಪ್ರಯಾಣ .
ಮಳೆ ಬಂದು ನಿಂತದ್ದರಿಂದ ಎಲ್ಲೆಲ್ಲೂ ಹಸಿರು, ಹಸಿರು , ಹಸಿರು. 
ಕವಿವಾಣಿಯೊಂದು ನೆನಪಿಗೆ ಬಂತು " ಹಚ್ಚ ಹಸಿರು ಪೈರುಪಚ್ಚೆ , ಇಲ್ಲಿ ಬಾಳ್ವುದೆಮ್ಮ ಇಚ್ಛೆ " ಆಲೆಮನೆಯ ಬೆಲ್ಲದ ಪರಿಮಳ ತೇಲಿ ಬಂದಾಗ ಮೂಗು ಸ್ವಲ್ಪ ದೊಡ್ಡದಾಗಿ ಇರಬಾರದಿತ್ತೇ ಅನ್ನಿಸಿದ್ದೂ ಉಂಟು ! ಕರಿಘಟ್ಟ ತಲುಪಿದಾಗ 11.30.  ವೇಂಕಟರಮಣಸ್ವಾಮಿ, ಯೋಗಭೋಗ ಶ್ರೀನಿವಾಸರ ದರ್ಶನ, ದೇವಾಲಯದ ಹಿಂಭಾಗಕ್ಕೆ ಹೋಗಿ ನೋಡಿದಾಗ, ಶ್ರೀರಂಗ ಪಟ್ಟಣ , ಕಾವೇರಿ, ನಿಮಿಷಾಂಬಾ ದೇವಸ್ಥಾನಗಳ ಪಕ್ಷಿನೋಟ ಮನಮೋಹಕ !! ನನಗೇನಾದರೂ ರೆಕ್ಕೆಗಳಿದ್ದಿದ್ದರೆ..?
ಬೆಟ್ಟದಿಂದಲೇ ಹಾರಿ ಹೋಗುವಷ್ಟು ಆತುರ. ವಾಸ್ತವಕ್ಕೆ ಬಂದೆ. ಸವಿ ನೆನಪಿಗಾಗಿ ಕ್ಲಿಕ್ , ಕ್ಲಿಕ್..ದೇವಾಲಯದಿಂದ ಹೊರಬಂದಾಗ ಕೆಂಪು ಬಿಳಿ ಪಟ್ಟೆ ಹಾಕಿದ ಹಳೆಯ ಮಂಟಪಗಳು, ಚೇತೋಹಾರೀ ಹುಣಿಸೇ ಮರಗಳು . ಜೊಂಪೆ ಜೊಂಪೆಯಾಗಿ  ಹುಣಿಸೇಕಾಯಿ. ಸರಿ !! ಎಳೆಯ ಹುಣಿಸೇಕಾಯಿಗಾಗಿ ಎಳೆಯರ, ಹಿರಿಯರ ಕೋತಿಯಾಟ !! ಇಲ್ಲೂ ಒಮ್ಮೆ ಕ್ಲಿಕ್, ಕ್ಲಿಕ್. ನಂತರ ನಾವು ಹೊರಟಿದ್ದು, ನಿಮಿಷಾಂಬಾ ದೇವಸ್ಥಾನಕ್ಕೆ ! ಬಿಸಿಲೇರಿತ್ತು. ಅರ್ಧ ಗಂಟೆ Q ನಲ್ಲಿ ಕಾಯಬೇಕಿತ್ತು. ಭಾನುವಾರದ ಭಕ್ತರು. ತಲೆ ಬಿಸಿಯಾಯ್ತು. ದೇವೀ ಸನ್ನಿಧಿ ಮಾತಾಡುವ  ಹಾಗಿಲ್ಲ .  ದರ್ಶನವಾದೊಡನೆ ಬಿಟ್ಟರೆ ಸಾಕು ಎಂಬಂತೆ ನದಿಯ ಬಳಿ ಓಡಿದೆವು. ತೆಪ್ಪದಲ್ಲಿ ತೇಲಾಡಿದೆವು. ನಂತರ ಗೋಸಾಯಿ ಘಾಟ್ !!
ಇಲ್ಲಿ ಎರಡು ಗಂಟೆಯ ವಿರಾಮ. ಕೋಸಂಬರಿ ತಯಾರಿಸಿ ಸರಿಯಾದ ಸ್ಥಳ ನೋಡಿ ಊಟಕ್ಕೆ ರೆಡಿ. ಅದಕ್ಕೂ ಮುಂಚೆ ಗೋದಾ ತಂದಿದ್ದ ಬಿಸಿಬಿಸಿ ಫಿಲ್ಟರಿನ ಕಾಫಿ. ತುಂಬಾ ಹಿತವಾಗಿತ್ತು. ನೀರಿನಲ್ಲಿ ಆಟವಾಡಿ ಊಟಕ್ಕೆ ಕುಳಿತಾಗ ಅದರ ಮಜವೇ ಮಜಾ !  ನಾಲ್ಕು ಗೋಡೆಯ ಮಧ್ಯೆ ಕುಳಿತು ಊಟಮಾಡಿ ಮಾಡಿ ಹೀಗೊಮ್ಮೆ ಪ್ರಕೃತಿಯ ಸಾನ್ನಿಧ್ಯದಲ್ಲಿ ಪುಣ್ಯನದಿ, ಹಳೇ ಮಂಟಪ, ಮರಗಿಡಗಳ ನಡುವೆ ಕುಳಿತು ಊಟ ಮಾಡಿದರೆ ಅದರ ಸವಿಯೇ ಬೇರೆ. ಮೊದಲು ಬಂದದ್ದು, ಕುಮುದಾ ಮನೆ ಬಿಸಿಬೇಳೆಭಾತ್, ನಂತರ ಲತಾ ಮನೆಯ ವಾಂಗೀಭಾತ್, ಗೀತಾ ಮನೆ ಸರ್ವಫಲ ರಸಾಯನ, ಪ್ರಫುಲ್ಲ ಮನೆ Mixture, ಚಿಪ್ಸ್ , ವೀಣಾ ಶಾಮ್ ತಂದಿದ್ದ Butter Sponge Cake, ಸ್ವೀಟ್ಸ್ , ಅಂದಹಾಗೆ ನಮ್ಮನೆ ಸಕ್ಕರೆ ಪೊಂಗಲ್, ಜಮ್ಮಿ ಮನೆ ಮೊಸರನ್ನ . ಅಷ್ಟೇ menu. ಇದರ ಮೇಲೆ ಜೀರ್ಣ ಆಗ್ಲಿ ಅಂತ ಎಲೆ ಅಡಿಕೆ !!  
ಮನುಷ್ಯ ತಿನ್ನಲು ಬದುಕಬೇಕೋ ? ಬದುಕಲು ತಿನ್ನಬೇಕೋ ? ಎಂಬ ಪ್ರಶ್ನೆ ಧುತ್ತೆಂದು ಮನಸ್ಸಿನಲ್ಲಿ ಮೂಡಿದ್ದು ಸಹಜವೇ. ಛೆ ! ಇಂದಿನ ದಿನವೇ ಶುಭದಿನವು ! ಅಂತಾ  ಖಾಲಿ ಮಾಡಿದ್ವಿ .
ನಂತರ ಪಾಸಿಂಗ್ ದಿ ಪಾರ್ಸೆಲ್ ಆಟ. ಮೂರು ಬಹುಮಾನ. ಕುಮುದಾಗೆ First prize , ಜಮ್ಮಿ Second Prize, ಲತಾ ಮಗ ಚಂದನ್ Third prize. ಬಹುಮಾನ ಕೊಟ್ಟವರು ನನ್ನ ಸಂಬಂಧಿ ಶ್ರೀಮತಿ ರುಕ್ಮಿಣಿ. ಅವರೇ ಅಂದಿನ ಚೀಫ್ ಗೆಸ್ಟ್ . ರಾಜ್ಯೋತ್ಸವ ವಿಶೇಷಕ್ಕೆ  !!!  ಈ ವೇಳೆಗಾಗಲೇ ಸಂಜೆ ನಾಲ್ಕಾಗಿತ್ತು. ಬಲಮುರಿಗೆ  ಹೊರಟೆವು. 
4.45. ಬಲಮುರಿ ತಲುಪಿದಾಗ ಎಲ್ಲೆಲ್ಲೂ ಜಲಧಾರೆ Best time ಅನ್ನಿಸ್ತು .. ನಾನು ಕುಮುದಾ ಶಿಶುಪದ್ಯ ಹೇಳಿಕೊಂಡು ನೀರಿನಲ್ಲಿ ನಲಿದಾಡಿದೆವು. ಚಿಕ್ಕ ಮಕ್ಕಳು  ಸ್ನಾನ ವೈಭವ ಕಂಡರು. ಬಿಸಿಬಿಸಿ ಟೀ ಮಾಡಿಕೊಂಡು ಎಲ್ಲರೂ ಹಿತವಾಗಿ ಹೀರಿದೆವು. 6. 20 ಕ್ಕೆ ಬಲಮುರಿಯಿಂದ ಬೆಂಗಳೂರಿಗೆ ಸವಾರಿ ! ಹರಟೆ, ಅಂತ್ಯಾಕ್ಷರಿ, ಚಿಕ್ಕನಿದ್ದೆ, ಮುಗಿದಾಗ  ರಾತ್ರಿ 8. 30. ರಾಜಿ, ಸಂಧ್ಯಾ ಸೇರಿ ಮಾಡಿದ್ದ ಚಪಾತಿ, ಗೊಜ್ಜು, ದಸರಾ ಮೆರವಣಿಗೆಯಂತೆ ಒಬ್ಬರ ಕೈಯಿಂದ ಇನ್ನೊಬ್ಬರ ಕೈಗೆ ಸಾಗುತ್ತಾ ಹೋಯ್ತು. ಬೆಂಗಳೂರು ಸೇರಿದಾಗ, 9. 30. ಎಲ್ಲರನ್ನೂ ಅವರವರ ಮನೆಯ ಬಳಿ ಇಳಿಸಿ , ನನ್ನ ಮನೆ ಸೇರಿದಾಗ ರಾತ್ರಿ 11. ಪ್ರವಾಸ ಯಾವಾಗಲೂ ಮನಸ್ಸಿಗೂ, ದೇಹಕ್ಕೂ ಮುದ ಕೊಡುವ ಸಂಗತಿ.
ಹರಿಣಿ ನಾರಾಯಣ್ , Nov 1 , 2002. 

No comments:

Post a Comment